ಖಾಯಂ ತಹಶೀಲ್ದಾರ್ ನೇಮಕಕ್ಕೆ ಅನಂತಮೂರ್ತಿ ಹೆಗಡೆ ಆಗ್ರಹ
ಶಿರಸಿ: ಕಳೆದ 4 ತಿಂಗಳಿನಿಂದ ಶಿರಸಿಯಲ್ಲಿ ತಹಶೀಲ್ದಾರ್ ಹುದ್ದೆ ಖಾಲಿ ಇದ್ದರೂ ಜನಪ್ರತಿನಿಧಿಗಳು ಗಮನವಹಿಸುತ್ತಿಲ್ಲ. ಇದರಿಂದ ಸಾರ್ವಜನಿಕರ ಕೆಲಸ ಕುಂಠಿತವಾಗಿದೆ. ತಕ್ಷಣ ಶಿರಸಿಗೆ ಖಾಯಂ ತಹಶೀಲ್ದಾರರನ್ನು ನೇಮಕಗೊಳಿಸಬೇಕು ಇಲ್ಲವಾದಲ್ಲಿ ಜೂ.23, ಸೋಮವಾರದಂದು ‘ಕಾರವಾರ ಚಲೋ’ ಹಮ್ಮಿಕೊಳ್ಳುವುದಾಗಿ ಸಾಮಾಜಿಕ ಹೋರಾಟಗಾರ, ಬಿಜೆಪಿ ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಮಂಗಳವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಹಸೀಲ್ದಾರ ಶ್ರೀಧರ ಮುಂದಲಮನಿ ಅವರನ್ನು ಮಾ.11 ರಂದು ವರ್ಗಾವಣೆಗೊಳಿಸಿ, ಆಡಳಿತದ ಹಿತದೃಷ್ಟಿಯಿಂದ ಡಾಂಡೇಲಿ ತಹಸೀಲ್ದಾರ ಶೈಲೇಶ ಪರಮಾನಂದ ಅವರಿಗೆ ಶಿರಸಿ ತಾಲೂಕಾ ತಹಶೀಲ್ದಾರರಾಗಿ ತಾತ್ಕಾಲಿಕವಾಗಿ ಅಧಿಕಾರ ನೀಡುತ್ತಾರೆ. ನಂತರ ಏ.19 ರಂದು ಮುಂಡಗೋಡಿನ ತಹಸೀಲ್ದಾರ ಶಂಕರ ಗೌಂಡಿ ಅವರಿಗೆ ಅಧಿಕಾರ ನೀಡುತ್ತಾರೆ. ಶಿರಸಿ ತಾಲೂಕು ದಾಸನಕೊಪ್ಪದಿಂದ ಮತ್ತಿಘಟ್ಟ, ಬನವಾಸಿಯಿಂದ ಆರಂಭವಾಗಿ ದೇವಿಮನೆ ಘಟ್ಟದವರೆಗೂ ವಿಸ್ತಾರ ಇದೆ. ಭೌಗೋಳಿಕವಾಗಿ ವಿಶಾಲವಾದ ದೊಡ್ಡ ತಾಲೂಕಿನಲ್ಲಿ ಅಧಿಕೃತ ತಹಶೀಲ್ದಾರ್ ಇಲ್ಲದಿರುವುದರಿಂದ ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ. ಈ ವಿಚಾರದಲ್ಲಿ ಸರ್ಕಾರ, ಮಾನ್ಯ ಶಾಸಕರು ನಡೆದುಕೊಂಡ ರೀತಿಯಿಂದ ಕ್ಷೇತ್ರ ಜನ ಬಹಳ ನೊಂದಿದ್ದಾರೆ. ರಾಜ್ಯದಲ್ಲಿ ಟ್ರಾನ್ಸ್ಫರ್ ದಂಧೆ ನಡಿತಾ ಇದೆಯೇ ? ರಾಜ್ಯದ ಕೆಲವು ಕಡೆಗಳಲ್ಲಿ ತಹಶೀಲ್ದಾರ್ ಪೋಸ್ಟಗೆ ಇಷ್ಟು, ಪಿಎಸ್ಐಗೆ ಇಷ್ಟು, ಬೇರೆ ಬೇರೆ ಪೋಸ್ಟ್ ಗೆ ಇಷ್ಟು ಹಣ ಅಂತ ಜನ ಮಾತನಾಡುತ್ತಾ ಇದ್ದಾರೆ, ನಮ್ಮ ಊರಿನಲ್ಲೂ ಅದೇ ರೀತಿ ಏನಾದರೂ ಆಗ್ತಾ ಇದೆಯೇ ಅಂತ ಜನರು ಸಂಶಯದಿಂದ ನೋಡುವಂತದ್ದಾಗಿದೆ ಎಂದು ಅವರು ಹೇಳಿದರು.
ತಹಶೀಲ್ದಾರ್ ಕೇವಲ ಒಬ್ಬ ಅಧಿಕಾರಿಯಲ್ಲ. ಇಡೀ ತಾಲೂಕಿಗೆ ಪ್ರಥಮ ಅಧಿಕಾರಿ, ದಂಡಾಧಿಕಾರಿಯಾಗಿದ್ದಾರೆ. ಖಾಯಂ ತಹಶೀಲ್ದಾರ್ ಇಲ್ಲದಿರುವುದರಿಂದ ನೂರಾರು ಫೈಲ್ ಗಳು ಪೆಡಿಂಗ್ ಬಿದ್ದಿವೆ. ಜನರ ಕೆಲಸವಾಗದೇ ಕಣ್ಣೀರು ಹಾಕುವಂತಾಗಿದ್ದು, ಹಿಂದಿನ ತಹಶೀಲ್ದಾರ ವರ್ಗಾವಣೆ ಅಧಿಸೂಚನೆಯಾಗಿ 4 ತಿಂಗಳು ಕಳೆದರೂ ಒಬ್ಬ ತಹಶೀಲ್ದಾರ್ ಇಲ್ಲದೆ ಜನರಿಗೆ ಹಿಂದೆ ಕೊಡುವುದು, ಬಡವರಿಗೆ ಕಣ್ಣೀರು ಹಾಕಿಸುವುದು ನಿಮಗೆ ಶೋಭೆ ತರುವುದೇ? ಬೇಜವಾಬ್ದಾರಿ ಶಾಸಕರು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ. ತಹಸೀಲ್ದಾರ ನೇಮಕ ಮಾಡುವಂತೆ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿ ಸಲ್ಲಿಸಿ, ಒಂದು ತಿಂಗಳು ಕಳೆದರೂ ಕಿಮ್ಮತ್ತು ನೀಡದಿರುವುದು ನೋವಿನ ಸಂಗತಿ. ಶಿರಸಿ ಸಹಾಯ ಆಯುಕ್ತರನ್ನು ಭಟ್ಕಳದ ಪ್ರಭಾರಿ ಸಹಾಯಕ ಆಯುಕ್ತರನ್ನಾಗಿ ನೇಮಕ ಮಾಡಿದ್ದಾರೆ. ನಗರಸಭೆಯ ಪೌರಾಯುಕ್ತರು ಪ್ರಭಾರಿ ಅಧಿಕಾರಿ ಇದ್ದಾರೆ. ತಾಲೂಕಿನಲ್ಲಿ ತಹಸೀಲ್ದಾರ ಮತ್ತು ಇತರ ತಾಲೂಕಾ ಮಟ್ಟದ ಅಧಿಕಾರಿ ಹುದ್ದೆ ಖಾಲಿ ಇರುವುದರಿಂದ ಜನಸಾಮಾನ್ಯರು ತೊಂದರೆಗೆ ಸಿಲುಕುವಂತಾಗಿದೆ ಎಂದು ಹೇಳಿದರು.
ಉಷಾ ಹೆಗಡೆ ಮಾತನಾಡಿ, ಕಳೆದ 4 ತಿಂಗಳಿನಿಂದ ಶಿರಸಿಯಲ್ಲಿ ತಹಶೀಲ್ದಾರ್ ಇಲ್ಲದೇ ಜನತೆ ಪರದಾಡುವಂತಾಗಿದೆ. ಇಲಾಖೆಯಲ್ಲಿ ಯಾವ ಕೆಲಸಗಳೂ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಜನರು ಒಂದು ಸಾಮಾನ್ಯ ಕಾಗದಪತ್ರಗಳಿಗಾಗಿ ಮೂರ್ನಾಲ್ಕು ತಿಂಗಳುಗಳ ಕಾಲ ಅಲೆದಾಡುತ್ತಿದ್ದಾರೆ. ಶಾಸಕರು ಯಾಕೋ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಶಾಸಕರಾದ ಭೀಮಣ್ಣ ನಾಯ್ಕ ಕೂಡಲೇ ಸ್ಪಂದಿಸಬೇಕು ಎಂದರು.
ರೈತ ನಾಯಕ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಈಗಾಗಲೇ ಬನವಾಸಿ ಭಾಗದ ಬಾಶಿ, ಚಿಗಳ್ಳಿ ಜಲಾಶಯಗಳು ಭರ್ತಿಯಾಗತೊಡಗಿದೆ. ಇದೇ ರೀತಿ ಮಳೆ ಮುಂದುವರೆದರೆ ಜಲಾಶಯದ ಕಟ್ಟೆಯೊಡೆದು ಪ್ರವಾಹ ಲಕ್ಷಣ ಉಂಟಾಗುತ್ತದೆ. ಹೀಗಿರುವಾಗ ಪರಿಸ್ಥಿತಿ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಬೇಕಿರುವ ತಹಶೀಲ್ದಾರರೇ ಇಲ್ಲದಿರುವುದು ಆತಂಕದ ವಿಚಾರ ಎಂದರು.
ಸುದ್ದಿಗೋಷ್ಠಿಯಲ್ಲಿ ರಮೇಶ ನಾಯ್ಕ ಕುಪ್ಪಳ್ಳಿ, ಉಷಾ ಹೆಗಡೆ, ನಾರಾಯಣ ಹೆಗಡೆ, ಶೋಭಾ ನಾಯ್ಕ, ರಾಘವೇಂದ್ರ ನಾಯ್ಕ ಬಿಸ್ಲಕೊಪ್ಪ, ರಂಗಪ್ಪ ಪರ್ಶೇರ್ ದಾಸನಕೊಪ್ಪ ಇದ್ದರು.
ಕಾರವಾರ ಚಲೋ :
ಶಿರಸಿಗೆ ಖಾಯಂ ತಹಶೀಲ್ದಾರ್ ನೇಮಕ ಮಾಡುವಂತೆ ಜೂ.23 ರಂದು ಕಾರವಾರ ಚಲೋ ಹಮ್ಮಿಕೊಂಡು ಜಿಲ್ಲಾಧಿಕಾರಿಗಳನ್ನು ನೇಮಕ ಮಾಡುವಂತೆ ವಿನಂತಿಸಲಾಗುತ್ತದೆ. ಬೆಳಿಗ್ಗೆ 8 ಗಂಟೆಗೆ ಶಿರಸಿಯಿಂದ ಬಸ್ ತೆರಳುತ್ತದೆ. ಆಗಮಿಸುವವರು ಮುಂಚಿತವಾಗಿ ತಿಳಿಸಬೇಕು. ಹೋರಾಟದಲ್ಲಿ ನಮ್ಮ ಜತೆ ಕೈಜೋಡಿಸಬೇಕು ಎಂದು ವಿನಂತಿಸಿದ್ದಾರೆ.
ಪ್ರಭಾರಿ ತಹಶೀಲ್ದಾರ್ ವಾರಕ್ಕೊಮ್ಮೆ ಬಂದರೆ, ಯಾರಿಗೆ ಏನು ಪ್ರಯೋಜನ. ಈಗಾಗಲೇ ನೂರಾರು ಫೈಲ್ ಗಳು ಪೆಂಡಿಂಗ್ ಉಳಿದಿದೆ. ಇರುವ ಎಸಿಯವರನ್ನು ಭಟ್ಕಳಕ್ಕೆ ಪ್ರಭಾರಿ ಹಾಕಿದ್ದಾರೆ. ಕ್ಷೇತ್ರದಲ್ಲೂ ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದೆ. ಶಾಸಕರು ಸಹ ಸಾರ್ವಜನಿಕರ ಮನವಿಗೆ, ಪತ್ರಿಕಾ ವರದಿಗೆ ಸ್ಪಂದಿಸುತ್ತಿಲ್ಲ. ಈ ಕೂಡಲೇ ನಮ್ಮ ತಾಲೂಕಿಗೆ ತಹಶೀಲ್ದಾರ್ ನೇಮಕ ನಡೆಯಲಿ – ಅನಂತಮೂರ್ತಿ ಹೆಗಡೆ
ಶಿರಸಿ ತಹಶೀಲ್ದಾರ್ ನೇಮಕ ತುರ್ತು ಮಾಡಬೇಕು, ಎಸಿಯವರಿಗೆ ಭಟ್ಕಳದ ಪ್ರಭಾರಿ ಜವಾಬ್ದಾರಿ ಕಡಿಮೆ ಮಾಡಬೇಕು ಎಂಬ ವಿಷಯದ ಬಗ್ಗೆ ಮೇ.19 ರಂದು ಜಿಲ್ಲಾಧಿಕಾರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಸಾರ್ವಜನಿಕರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿತ್ತು. ಕಾಲಾವಕಾಶವನ್ನು ನೀಡಾಗಿತ್ತು. ಆದರೆ ಇದಕ್ಕೆ ಶಾಸಕರಿಂದಾಗಲೀ, ಸರಕಾರದಿಂದಾಗಲಿ ಯಾವ ಸ್ಪಂದನೆಯೂ ದೊರೆತಿಲ್ಲ. ಆ ಕಾರಣಕ್ಕೆ ಇದೀಗ ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ದೃಷ್ಟಿಯಿಂದ ಕಾರವಾರ ಚಲೋ ಅನಿವಾರ್ಯವಾಗಿದೆ.